ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಕಾರ್ಯಕ್ರಮದ ಅಂಗವಾಗಿ ಜು.26ರಂದು ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಮೃತ್ಯುಂಜಯ ಹೋಮ ಹಾಗೂ ಭಕ್ತಾದಿಗಳಿಂದ ಲಕ್ಷ ಶಿವಪಂಚಾಕ್ಷರಿ ಮಂತ್ರ ಪಠಣ ಯಜ್ಞ ನಡೆಯಿತು.
ಮೃತ್ಯುಂಜಯ ಹೋಮ
ದೇವಾಲಯದ ತಂತ್ರಿವರ್ಯರಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟ್ರಮಣ ಭಟ್ ಕಾನುಮೂಲೆರವರ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ ಮೃತ್ಯುಂಜಯ ಹೋಮ ಆರಂಭಗೊಂಡಿತು. ಮಧ್ಯಾಹ್ನ ಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆದು ಸೇವಾದಾರರಿಗೆ ಸಂಕಲ್ಪ ಸಹಿತ ಪ್ರಸಾದ ವಿತರಣೆ ನಡೆಯಿತು.
ಲಕ್ಷ ಶಿವಪಂಚಾಕ್ಷರಿ ಪಠಣ

ಮಧ್ಯಾಹ್ನ 12.30ರಿಂದ ವೇದಮೂರ್ತಿ ಮಂಜುಳಗಿರಿ ವೆಂಕಟ್ರಮಣ ಭಟ್ರವರ ನೇತೃತ್ವದಲ್ಲಿ ಭಕ್ತಾದಿಗಳಿಂದ ಲಕ್ಷ ಶಿವಪಂಚಾಕ್ಷರಿ ಪಠಣ ಯಜ್ಞ ನಡೆಯಿತು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೆಟ್ಟಂಪಾಡಿ ಬೀಡು ದಂಪತಿ ದೀಪ ಬೆಳಗಿಸಿ ಪಠಣ ಯಜ್ಞಕ್ಕೆ ಚಾಲನೆ ನೀಡಿದರು. ಸುಮಾರು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು 216 ಬಾರಿ ಶಿವ ಪಂಚಾಕ್ಷರಿ ಪಠಣ ಮಾಡಿದರು. ಬಳಿಕ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ ಬೆಟ್ಟಂಪಾಡಿ ಗುತ್ತು, ಅಭಿವೃದ್ಧಿ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಹಾಗೂ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡರು.